KANNADA

"ಕುಮಾರಸ್ವಾಮಿ ತಮ್ಮ ಅಸ್ತಿತ್ವವಿದೆ ಎಂದು ತೋರಿಸಲು ಒಂದಷ್ಟು ವಿವಾದತ್ಮಕ ಹೇಳಿಕೆಗಳನ್ನು ಕೊಡುತ್ತಿರುತ್ತಾರೆ"

ಬೆಂಗಳೂರು: ಕುಮಾರಸ್ವಾಮಿ ತಮ್ಮ ಅಸ್ತಿತ್ವವಿದೆ ಎಂದು ತೋರಿಸಲು ಒಂದಷ್ಟು ವಿವಾದತ್ಮಕ ಹೇಳಿಕೆಗಳನ್ನು ಕೊಡುತ್ತಿರುತ್ತಾರೆ ಎಂದು ಕಾಂಗ್ರೆಸ್ ವಕ್ತಾರ ರಮೇಶ್ ಬಾಬು ಅವರು ಹೆಚ್ ಡಿಕೆ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದಾರೆ ಅವರು ಮಾಧ್ಯಮಗೋಷ್ಟಿಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು ಕೆಪಿಸಿಸಿ ಮಾಧ್ಯಮ ಮತ್ತು ಸಂವಹನ ವಿಭಾಗದ ರಮೇಶ್ ಬಾಬು ಅವರ ಮಾಧ್ಯಮಗೋಷ್ಠಿ ಮುಖ್ಯಾಂಶಗಳು: ರಾಜ್ಯಸಭಾ ಸದಸ್ಯರಾದ ಲೇಹರ್ ಸಿಂಗ್ ಅವರು ಮಲ್ಲಿಕಾರ್ಜುನ ಖರ್ಗೆ ಅವರ ಕುಟುಂಬದ ಟ್ರಸ್ಟ್ ಸಿಎ ನಿವೇಶನವನ್ನು ಅಕ್ರಮವಾಗಿ ಪಡೆದುಕೊಂಡಿದೆ ಎಂದು ಹೇಳಿಕೆ ನೀಡಿದ್ದಾರೆ. ಸಿದ್ಧಾರ್ಥ ವಿಹಾರ ಶಿಕ್ಷಣ ಟ್ರಸ್ಟ್ ಗೆ ಕೆಐಡಿಬಿಯ ಏರೋಸ್ಪೇಸ್ ಪಾರ್ಕ್ ನಲ್ಲಿ ನೀಡಿರುವ ಸಿಎ ಸೈಟ್ ಕುರಿತು ಅವರು ಎತ್ತಿರುವ ತಕರಾರಿಗೆ ಯಾವುದೇ ಆಕ್ಷೇಪಣೆಯಿಲ್ಲ. ಆದರೆ ಮಲ್ಲಿಕಾರ್ಜುನ ಖರ್ಗೆ ಅವರ ಕುಟುಂಬವನ್ನು ಗುರಿ ಮಾಡಿರುವ ರೀತಿ ಸಂಪೂರ್ಣ ಭಟ್ಟಂಗಿ ತನದಿಂದ ಕೂಡಿದೆ. ರಾಜಸ್ಥಾನದಿಂದ ರಾಜಕೀಯಕ್ಕಾಗಿ ವಲಸೆ ಬಂದ ರಾಜಕಾರಣಿ. ಇಲ್ಲಿಗೆ ಬಂದು ರಾಜಕೀಯವಾಗಿ ಲಾಟರಿ ಹೊಡೆದವರಲ್ಲಿ ಇವರು ಒಬ್ಬರು. ಇವರಿಂದ ಕರ್ನಾಟಕದ ಅಭಿವೃದ್ಧಿಗೆ, ಬೆಳವಣಿಗೆಗೆ ಕಿಂಚಿತ್ತೂ ಕೊಡುಗೆಯಿಲ್ಲ. ಬಿಜೆಪಿಯ ಖಜಾಂಚಿ ಆಗಿದ್ದವರು. ಇವರು ಹೇಗೆ ಇಂತಹ ಉನ್ನತ ಸ್ಥಾನಕ್ಕೆ ಹೋದರು ಎಂಬುದರ ಬಗ್ಗೆ ತನಿಖೆ ನಡೆಸಬೇಕಿದೆ. ಯಾವ, ಯಾವ ನಾಯಕರಿಗೆ ಏನು ಕೆಲಸ ಮಾಡಿಕೊಟ್ಟು ಈ ಹುದ್ದೆಗೆ ಏರಿರುವ ಬಗ್ಗೆಯೂ ತನಿಖೆ ನಡೆಸಬೇಕು. ಲಾಟರಿ ರಾಜಕಾರಣಿಯಾಗಿ ಎಂಎಲ್ ಸಿ ಆಗಿದ್ದವರು ಕುಮಾರಸ್ವಾಮಿ ಕೃಪಾಕಟಾಕ್ಷದಿಂದ ರಾಜ್ಯಸಭೆಗೆ ಹೋಗಿದ್ದಾರೆ. ಆಗಾಗ ತಮ್ಮ ಅಸ್ತಿತ್ವವಿದೆ ಎಂದು ತೋರಿಸಲು ಒಂದಷ್ಟು ವಿವಾದತ್ಮಕ ಹೇಳಿಕೆಗಳನ್ನು ಕೊಡುತ್ತಿರುತ್ತಾರೆ. ಮೋದಿ ಅವರು ಗುಜರಾತಿನ ಮುಖ್ಯಮಂತ್ರಿ ಆಗಿದ್ದಾಗ ರಾಷ್ಟ್ರಮಟ್ಟದಲ್ಲಿ ಪ್ರಮುಖ ಪತ್ರಿಕೆಗಳಲ್ಲಿ ಮುಖಪುಟದ ಜಾಹಿರಾತು ನೀಡಿ ವಿವಾದಕ್ಕೆ ಒಳಗಾಗಿದ್ದರು. ಯಡಿಯೂರಪ್ಪ ಅವರನ್ನು 17.05.2013ರಲ್ಲಿ ಸಮರ್ಥಿಸಿಕೊಳ್ಳಲು ಹೋಗಿ ರಾಷ್ಟೀಯ ನಾಯಕ ಎಲ್. ಕೆ. ಅಡ್ವಾಣಿ ವಿರುದ್ಧ 4 ಪುಟಗಳ ಪತ್ರ ಬರೆದು ಭ್ರಷ್ಟಾಚಾರದ ಆರೋಪ ಮಾಡಿದ ಕಾರಣಕ್ಕೆ ಅಂದಿನ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾಗಿದ್ದ ಪ್ರಹ್ಲಾದ್ ಜೋಶಿ ಲೇಹರ್ ಸಿಂಗ್ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಿದ್ದರು. ಇವರ ಉಚ್ಚಾಟನೆಯನ್ನು ಬಿಜೆಪಿ ಏಕೆ ವಾಪಾಸ್ ಪಡೆದುಕೊಂಡಿತು ಅಥವಾ ಅಡ್ವಾಣಿ ಅವರ ಮೇಲಿರುವ ಅಪರಾಧವನ್ನು ಬಿಜೆಪಿ ಒಪ್ಪಿಕೊಂಡಿತೆ? ಇದರ ಬಗ್ಗೆ ಆ ಪಕ್ಷದ ನಾಯಕರೇ ಉತ್ತರ ಕೊಡಬೇಕು. ಆಗಾಗ ವಿವಾದ ಹುಟ್ಟು ಹಾಕುವುದು ಇವರ ಚಾಳಿ. ಮಲ್ಲಿಕಾರ್ಜುನ ಖರ್ಗೆ ಅವರ ಕುಟುಂಬದ ಟ್ರಸ್ಟ್ ಗೆ ನಿಯಮಗಳನ್ನು ಮೀರಿ ಸಿಎ ಸೈಟ್ ಹಂಚಿಕೆ ಮಾಡಿರುವುದು ಕಾನೂನು ಬಾಹಿರ ಎಂದು ಹೇಳುತ್ತಿದ್ದಾರೆ. ಆದರೆ ಕರ್ನಾಟಕದಲ್ಲಿ ಇರುವ ನಿಯಮಗಳ ಪ್ರಕಾರ ವ್ಯಕ್ತಿಗತವಾಗಿ ಸಿಎ ಸೈಟ್ ಅನ್ನು ಕರ್ನಾಟಕದಲ್ಲಿ ನೀಡಲು ಬರುವುದಿಲ್ಲ. ಸಹಕಾರಿ ಸಂಘ, ಟ್ರಸ್ಟ್, ಸಂಘ ಗಳಿಗೆ ಮಾತ್ರ ನಿವೇಶನ ನೀಡಲು ಸಾಧ್ಯ. ಅದೇ ರೀತಿ ಅವರ ಸಂಸ್ಥೆಗೆ ನಿವೇಶನ ನೀಡಲಾಗಿದೆ. ಇದನ್ನೂ ಓದಿ: "ಸಿದ್ದರಾಮಯ್ಯ ಶಿಶುಪಾಲನಂತೆ ತಪ್ಪಿನ ಮೇಲೆ ತಪ್ಪು ಮಾಡುತ್ತಿದ್ದಾರೆ!!" ಈ ಮೊದಲು ಯಾವುದಾದರು ಸಂಘ ಸಂಸ್ಥೆಗಳು ಅರ್ಜಿ ಹಾಕಿದ ತಕ್ಷಣ ಸಿಎ ನಿವೇಶನ ಕೊಡಲಾಗುತ್ತಿತ್ತು. ಆದರೆ ಈಗ ನಿಯಮಗಳು ಬದಲಾವಣೆಯಾಗಿದ್ದು ಆ ಸಂಸ್ಥೆ ಪ್ರಾರಂಭವಾಗಿ ಕನಿಷ್ಠ 3 ವರ್ಷಗಳಾಗಿರಬೇಕು ಹಾಗೂ ಆಡಿಟ್ ವರದಿ ಆಗಿರಬೇಕು. ಕಳೆದ 40 ವರ್ಷಗಳಿಂದ ಕೆಐಡಿಬಿ ಸಿಎ ನಿವೇಶನಗಳನ್ನು ಹಂಚಿಕೆ ಮಾಡಿಲ್ಲ. ಕೆಲವೊಂದು ಪ್ರಕರಣಗಳಲ್ಲಿ ಹೈಕೋರ್ಟ್ ಸಂಘ ಸಂಸ್ಥೆಗಳಿಗೆ ಸಿಎ ನಿವೇಶನ ಹಂಚಿಕೆ ಮಾಡಬೇಕು ಎಂದು ಕಟ್ಟುನಿಟ್ಟಾಗಿ ಹೇಳಿತ್ತು. ಇದರ ಮೇರೆಗೆ ಇತ್ತೀಚಿಗೆ ಹಂಚಿಕೆ ಮಾಡಲಾಗುತ್ತಿದೆ. ಇದೇ ರೀತಿ ಸಿದ್ಧಾರ್ಥ ವಿಹಾರ ಶಿಕ್ಷಣ ಟ್ರಸ್ಟ್ ಗೆ ಸಿಎ ಸೈಟ್ ಅನ್ನು ನಿಯಮಾನುಸಾರ ಹಂಚಿಕೆ ಮಾಡಲಾಗಿದೆ. ನಿಯಮಗಳನ್ನು ಸರಿಯಾಗಿ ತಿಳಿದುಕೊಳ್ಳದೆ ಖರ್ಗೆ ಅವರ ಕುಟುಂಬಕ್ಕೆ ಮಸಿ ಬಯಲು ಈ ಆರೋಪ ಮಾಡುತ್ತಿದ್ದಾರೆ ಲೆಹರ್ ಸಿಂಗ್ ಅವರು. ಇದೇ ಲೆಹರ್ ಸಿಂಗ್ ಅವರು 2010, 2016 ರಲ್ಲಿ ಎಂಎಲ್ ಸಿ ಆಗಿದ್ದಾಗ ಸಲ್ಲಿಸಿರುವ ಅಫಿಡವಿಟ್ ಅಲ್ಲಿ ಹಾಗೂ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗುವಾಗ ಸಲ್ಲಿಸಿದ್ದ ಅಫೀಡವಿಟ್ಟಿನಲ್ಲಿ ಎಷ್ಟು ಆಸ್ತಿಯನ್ನು ನಮೂದಿಸಿದ್ದಾರೆ ಎಂದು ಸಾರ್ವಜನಿಕವಾಗಿ ಬಹಿರಂಗಪಡಿಸಲಿ. 2010ರಲ್ಲಿ 12- 13 ಕೋಟಿ ಘೋಷಿತ ಆಸ್ತಿಯಿತ್ತು. ಈಗ 70ರಿಂದ 72 ಕೋಟಿ ಆಸ್ತಿಯನ್ನು ಘೋಷಣೆ ಮಾಡಿಕೊಂಡಿದ್ದಾರೆ. ನಿಮ್ಮ ರಾಜಕೀಯ ನಡೆಗಳ ಅನುಮಾನದಿಂದ ಕೂಡಿರುವಾಗ ಇನ್ನೊಬ್ಬರ ಮೇಲೆ ಕೆಸರು ಎರಚುವ ಕೆಲಸ ಮಾಡಬೇಡಿ. ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಯಾವ, ಯಾವ ಸಂಘ ಸಂಸ್ಥೆಗಳಿಗೆ ರಾಜ್ಯದಲ್ಲಿ ಎಲ್ಲೆಲ್ಲಿ ಎಷ್ಟು ಎಕರೆ ಸಿಎ ನಿವೇಶನಗಳು ಮಂಜೂರಾಗಿವೆ ಎಂಬುದನ್ನು ನೀವೇ ರಾಜ್ಯಪಾಲರಿಗೆ ಹೇಳಿ ತನಿಖೆ ಮಾಡಿಸಬೇಕಾಗಿ ಅವರಲ್ಲಿ ಮನವಿ ಮಾಡುತ್ತೇನೆ. ಬಿಜೆಪಿ ಮತ್ತು ಬಿಜೆಪಿ ಮತ್ತು ಬಿಜೆಪಿ ಬೆಂಬಲಿತ ಹತ್ತಿಪ್ಪತ್ತು ಸಂಸ್ಥೆಗಳಿಗೆ ಕಾನೂನು ಬಾಹಿರವಾಗಿ ನಿವೇಶನಗಳನ್ನು ನೀಡಲಾಗಿದೆ. ಈ ಅಕ್ರಮದ ಹೊಣೆಯನ್ನು ಸ್ವತಃ ಅವರು ಸಹ ಹೊರಬೇಕಾಗಿದೆ. ಏಕೆಂದರೆ ಅವರು ಸಹ ಬಿಜೆಪಿ ಬೆಂಬಲಿತ ಸಂಸ್ಥೆಗಳಲ್ಲಿ ಗುರುತಿಸಿಕೊಂಡಿದ್ದಾರೆ. ಬಿಜೆಪಿ ಸದಸ್ಯರಾಗಿದ್ದಾರೆ, ಬಿಜೆಪಿಯಿಂದ ಜನಪ್ರತಿನಿಧಿಯಾಗಿದ್ದಾರೆ. ಆದಕಾರಣ ಇವರು ಈ ಅಕ್ರಮಗಳಿಗೆ ಉತ್ತರ ನೀಡಬೇಕು. ಬಿಜೆಪಿ ಮತ್ತು ಬಿಜೆಪಿ ಬೆಂಬಲಿತ ಸಂಸ್ಥೆಗಳು ಅಕ್ರಮವಾಗಿ ಪಡೆದಿರುವ ನಿವೇಶನವನ್ನು ತಕ್ಷಣ ವಾಪಸ್ ಮಾಡಿ ಎಂದು ನಾವು ಹೇಳುವುದಿಲ್ಲ. ಏಕೆಂದರೆ ನಾವು ಲೆಹರ್ ಸಿಂಗ್ ರೀತಿ ಕೆಳಮಟ್ಟದ ರಾಜಕಾರಣ ಮಾಡುವುದಿಲ್ಲ. ಮಲ್ಲಿಕಾರ್ಜುನ್ ಖರ್ಗೆ ಅವರ ಕುಟುಂಬದ ಸಿದ್ಧಾರ್ಥ ಸಂಸ್ಥೆಯು ಸಿದ್ಧಾರ್ಥನ ಚಿಂತನೆಗಳನ್ನು ಹರಡುವ ಉದ್ದೇಶಕ್ಕಾಗಿ ಭೂಮಿಯನ್ನು ಪಡೆದಿದ್ದಾರೆ. ಇದಕ್ಕೆ ಜಾತಿಯ ಬಣ್ಣ ಲೇಪಿಸಿರುವುದು ಖಂಡನೀಯ. ಇದನ್ನೂ ಓದಿ: Daily GK Quiz: ನೊಬೆಲ್ ಪ್ರಶಸ್ತಿಯನ್ನು ಗೆದ್ದ ಮೊದಲ ಭಾರತೀಯ ಮಹಿಳೆ ಯಾರು? ಮಲ್ಲಿಕಾರ್ಜುನ ಖರ್ಗೆ ಅವರು ದಲಿತ ಸಮುದಾಯಕ್ಕೆ ಸೇರಿರುವ ಕಾರಣಕ್ಕೆ ನಿವೇಶನ ಹಂಚಿಕೆಯಾಗಿದೆ ಎಂದು ಬೃಹಸಿನ್ ಅವರು ಬರೆದಿರುವ ಚಿತ್ರದಲ್ಲಿ ಉಲ್ಲೇಖಿಸಿದ್ದಾರೆ. ದಲಿತ ವಿರೋಧಿ ಮನಸ್ಥಿತಿ ಹೊಂದಿರುವ ಬಿಜೆಪಿಯ ಗುಣವನ್ನು ಲೇಹರ್ ಸಿಂಗ್ ಹೊರ ಹಾಕಿದ್ದಾರೆ. 1994 ರಲ್ಲಿ ಸ್ಥಾಪನೆಯಾದ ಟ್ರಸ್ಟ್ ಸಾರ್ವಜನಿಕ ಉದ್ದೇಶಕ್ಕಾಗಿ ಕೆಲಸ ಮಾಡುತ್ತಿದೆ. ಟ್ರಸ್ಟ್ ಗೆ ಹೋಗುವ ಭೂಮಿಯನ್ನು ಸಾರ್ವಜನಿಕ ಉದ್ದೇಶಕ್ಕಾಗಿಯೇ ಬಳಸಬೇಕಾಗುತ್ತದೆ ಹೊರತು ಸ್ವಂತ ಉದ್ದೇಶಕ್ಕೆ ಬಳಸುವಂತಿಲ್ಲ. ಇಂತಹ ಕೆಲಸಗಳನ್ನು ಲೇಹರ್ ಸಿಂಗ್ ಅವರು ಮಾಡಿ ಅನುಭವ ಇರಬಹುದು. ಏಕೆಂದರೆ ಅವರು ತಮ್ಮ ಅಫಿಡವಿಟ್ಅಲ್ಲಿ ಶೇರ್ ಸೇರಿದಂತೆ ಅನೇಕ ವ್ಯವಹಾರಗಳ ಬಗ್ಗೆ ತಿಳಿಸಿದ್ದಾರೆ. ಈ ನೆಲದ ಕಾನೂನು ಅರ್ಥ ಮಾಡಿಕೊಳ್ಳಿ, ನಮ್ಮಲ್ಲಿಗೆ ಬಂದರೆ ನಾವೇ ಮಾಹಿತಿ ನೀಡುತ್ತೇವೆ. ಸುಳ್ಳು ಮಾಹಿತಿ ನೀಡಬೇಡಿ. ಲೆಹರ್ ಸಿಂಗ್ ಅವರು ಒಂದು ಸಮುದಾಯವನ್ನು ಗುರಿ ಮಾಡಿರುವ ಕಾರಣಕ್ಕೆ ಅವರ ವಿರುದ್ಧ ದೂರು ದಾಖಲು ಮಾಡಲಾಗುವುದು. ಅವರು ಸಾರ್ವಜನಿಕವಾಗಿ ಕ್ಷಮೆ ಕೊಡಬೇಕು ಇಲ್ಲದಿದ್ದರೆ ಕಾಂಗ್ರೆಸ್ ಪಕ್ಷವು ಅವರ ವಿರುದ್ಧ ಹೋರಾಟ ಮಾಡುತ್ತದೆ. ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಾಮಚಂದ್ರಪ್ಪ ಅವರು ಉಪಸ್ಥಿತರಿದ್ದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... Android Link - Apple Link - ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter Link - Facebook Link - Youtube Link - Instagram Link - Sharechat Link - Threads Link- WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.