NEWS

Ancestors Rising: ಯಾರು ಈ ರಾಜ ಅನಂತ ವರ್ಮ? ಈತ ರಚಿಸಿದ್ದ ಶಾಸನದಲ್ಲಿ ಅಷ್ಟಕ್ಕೂ ಏನಿದೆ ರಹಸ್ಯ?

ಶಾಸನ ಇಂದಿಗೂ ಜಗತ್ತಿನಲ್ಲಿ ಅಲ್ಲಲ್ಲಿ ಪ್ರಾಚೀನ ಕಾಲದ ಅವಶೇಷಗಳು ಪತ್ತೆಯಾಗುತ್ತಿರುವ ಬಗ್ಗೆ ಸುದ್ದಿಯಾಗುತ್ತಲೇ ಇರುತ್ತದೆ. ಅದ್ಕಕೆಂದೇ ಪ್ರತಿ ದೇಶಗಳು ತಮ್ಮ ಪ್ರಾಚೀನ ಇತಿಹಾಸ ಅಥವಾ ಸಂಪ್ರದಾಯದ ಬಗ್ಗೆ ಇನ್ನಷ್ಟು ಮಾಹಿತಿ ತಿಳಿಯಲೆಂದು ಪುರಾತತ್ವ ಇಲಾಖೆಯನ್ನು ಹೊಂದಿವೆ. ಮೂಲತಃ ಈ ರೀತಿಯ ಪ್ರಾಚೀನ ಅವಶೇಷಗಳು ಅವು ದೊರೆಯುವ ಪ್ರದೇಶದ ಅಥವಾ ದೇಶದ ಗತಕಾಲದ ಬಗ್ಗೆ ಮಾಹಿತಿ ನೀಡುವುದಲ್ಲದೆ ಅಲ್ಲಿನ ಸಂಸ್ಕೃತಿ ಸಂಪ್ರದಾಯಗಳ ಬಗ್ಗೆ ಅವ್ಯಾಹತವಾಗಿ ತಿಳಿಸಿಕೊಡುತ್ತವೆ ಅಥವಾ ಕಿರುದಾದ ಪರಿಚಯ ನೀಡುತ್ತವೆ. ಅದರಂತೆ ಭಾರತೀಯ ಪುರಾತತ್ವ ಇಲಾಖೆಯೂ ಸಹ ಈ ನಿಟ್ಟಿನಲ್ಲಿ ಕಾರ್ಯತತ್ಪರವಾಗಿದ್ದು ಆಗಾಗ ಏನಾದರೊಂದು ಅವಶೇಷಗಳನ್ನು ಪತ್ತೆ ಮಾಡುತ್ತಲೇ ಇರುತ್ತದೆ. ಇತ್ತೀಚಿಗಷ್ಟೇ ತಮಿಳುನಾಡಿನಲ್ಲಿ ಪುರಾತನ ವಿಗ್ರಹವೊಂದು ಪತ್ತೆಯಾಗಿದ್ದರ ಬಗ್ಗೆ ಸುದ್ದಿಯಾಗಿತ್ತು. ಅದಕ್ಕೂ ಮೊದಲು ಬೆಂಗಳೂರಿನ ಕೆಲ ಭಾಗಗಳಲ್ಲಿ ತಮಿಳು ಹಾಗೂ ಕನ್ನಡದ ಲಿಪಿಗಳಲ್ಲಿ ಬರೆದಿರುವ ಕೆಲ ಶಾಸನ ಹಾಗೂ ಮೂರ್ತಿ ಪತ್ತೆಯಾಗಿತ್ತು. ರಾಜ ಅನಂತದೇವ ವರ್ಮನ ಶಾಸನಗಳು ಪತ್ತೆ ಈಗ ಇದಕ್ಕೆ ಪೂರಕವೆಂಬಂತೆ ಮತ್ತೊಂದು ಪ್ರಾಚೀನ ಶಾಸನವೊಂದು ಆಂಧ್ರಪ್ರದೇಶದಲ್ಲಿ ಪತ್ತೆಯಾಗಿದೆ. ಆಂಧ್ರಪ್ರದೇಶದ ವಿಜಿನಗರಂ ಜಿಲ್ಲೆಯ ಜಾಮಿಯ ಎಂಬಲ್ಲಿ ಪೂರ್ವ ಗಂಗರು ವಂಶದ ದೊರೆಯನಾದ ರಾಜ ಅನಂತದೇವ ವರ್ಮನ ಶಾಸನಗಳು ಪತ್ತೆಯಾಗಿವೆ ಎಂದು ಭಾರತೀಯ ಪುರಾತತ್ವ ಸರ್ವೇಕ್ಷಣೆಯ ಎಪಿಗ್ರಫಿ ವಿಭಾಗದ ನಿರ್ದೇಶಕರಾದ ಕೆ.ಮುನಿರತ್ನಂ ರೆಡ್ಡಿ ಅವರು ಸುದ್ದಿ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಅವರ ಪ್ರಕಾರ, 11 ನೇ ಶತಮಾನದ ಹಿಂದಿನ ಶಾಸನಗಳು ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿವೆ. ಪೂರ್ವ ಗಂಗರು ರಾಜವಂಶವು ಉತ್ತರ ಭಾಗದ ಆಂಧ್ರಪ್ರದೇಶದ ರಾಜ್ಯದ ಪ್ರದೇಶಗಳನ್ನು ಆಳಿತ್ತು ಎಂಬುದನ್ನು ಸದ್ಯ ದೊರೆತಿರುವ ಶಾಸನಗಳು ಸಾಬೀತುಪಡಿಸಿರುವುದಾಗಿ ತಿಳಿಸಿದ್ದಾರೆ. ಆಳ್ವಿಕೆಯ ಬಗ್ಗೆ ವ್ಯಾಪಕ ಪ್ರಚಾರ 1077 ರಿಂದ 1150 ರ ನಡುವೆ ರಾಜನಾಗಿದ್ದ ಅನಂತವರ್ಮ ದೇವನು 40 ವರ್ಷಗಳ ಆಳ್ವಿಕೆಯನ್ನು ಪೂರ್ಣಗೊಳಿಸಿದ್ದ. ತದನಂತರ ರಾಜನು ಶಾಸನಗಳನ್ನು ರಚಿಸುವ ಮೂಲಕ ತನ್ನ ಪ್ರಚಾರ ಕಾರ್ಯಕ್ಕೆ ಹೆಚ್ಚಿನ ಮಹತ್ವ ನೀಡಿದ್ದ ಎಂಬುದು ಈ ಶಾಸನಗಳ ಮೂಲಕ ತಿಳಿದುಬರುವುದಾಗಿ ನಿರ್ದೇಶಕರು ಹೇಳಿದ್ದಾರೆ. ಒಟ್ಟಿನಲ್ಲಿ ಅನಂತ ವರ್ಮನು ತನ್ನ ಆಳ್ವಿಕೆಯ ಬಗ್ಗೆ ವ್ಯಾಪಕ ಪ್ರಚಾರವನ್ನು ನೀಡಿದ್ದನು ಎಂಬುದನ್ನು ಈ ಶಾಸನಗಳ ಮೂಲಕ ತಿಳಿಯಬಹುದಾಗಿದೆ. ಇದನ್ನೂ ಓದಿ: Ancestors Rising: ಭಾರತ-ಶ್ರೀಲಂಕಾ ನಡುವೆ ಭೂಸಂಪರ್ಕ ಇತ್ತು, ಬಹಿರಂಗಪಡಿಸಿದೆ ಈ ಹಾವು! ಇನ್ನು, ಆ ಶಾಸನಗಳು ಸಂಸ್ಕೃತ ಮತ್ತು ತೆಲುಗು ಎರಡೂ ಭಾಷೆಗಳಲ್ಲಿವೆ ಎಂದು ಶ್ರೀ ಮುನಿರತ್ನಂ ರೆಡ್ಡಿ ಹೇಳಿದ್ದಾರೆ. ವಿಜಿನಗರಂ ಜಿಲ್ಲೆಯಿಂದ 20 ಕಿ.ಮೀ ದೂರದಲ್ಲಿರುವ ಜಾಮಿ ಗ್ರಾಮದ ವೇಣುಗೋಪಾಲ ಸ್ವಾಮಿ, ತ್ರಿಪುರಾಂತಕ ಸ್ವಾಮಿ ಹಾಗೂ ಜನಾರ್ದನ ಸ್ವಾಮಿ ದೇವಸ್ಥಾನಗಳ ಆವರಣದಲ್ಲಿ ಈ ಶಾಸನಗಳು ಕಂಡುಬಂದಿದ್ದು, ಇವು ಸುಮಾರು 900 ವರ್ಷಗಳಿಂದ ಹಾಗೆಯೇ ಉಳಿದಿವೆ ಎಂದು ಎಎಸ್‌ಐ ಅಧಿಕಾರಿಯಾದ ಮೇಕಾ ವೆಂಕಟ ರಾಘವೇಂದ್ರ ವರ್ಮ ಅವರು ವಿವರಿಸುತ್ತಾರೆ. ಒಟ್ಟಿನಲ್ಲಿ ಈ ರೀತಿಯಾಗಿ ದೊರೆಯುತ್ತಿರುವ ಶಾಸನಗಳು, ದೇವಾಲಯಗಳ ರಚನೆಗಳು ಹಾಗೂ ವಿವಿಧ ಮೂರ್ತಿಗಳು ಗತ ಕಾಲದ ಶ್ರೀಮಂತ ಸಂಸ್ಕೃತಿಯ ಬಗ್ಗೆ ನಮಗೆ ಸಾರಿ ಸಾರಿ ಹೇಳುತ್ತವೆ. ಈ ಮೂಲಕ ಆ ಸಮಯದಲ್ಲೇ ಜನಜೀವನ, ರಾಜ್ಯಾಡಳಿತ ಹಾಗೂ ಕಲೆಯು ಎಷ್ಟೊಂದು ಉಚ್ಛ್ರಾಯ ಸ್ಥಿಯಲ್ಲಿತ್ತು ಎಂಬುದನ್ನು ಸಹ ಊಹಿಸಬಹುದಾಗಿದೆ. ಈ ರೀತಿಯ ಅವಶೇಷಗಳು ದೊರೆತಾಗ ಇವು ಆ ಪ್ರದೇಶದ ಇತಿಹಾಸವನ್ನು ಮಾತ್ರವೇ ಅಲ್ಲದೆ ಆ ಕಾಲದ ವೈಭೋಗ ಹಾಗೂ ಶ್ರೀಮಂತಿಕೆಯ ಬಗ್ಗೆಯೂ ತಿಳಿಸಿಕೊಡುತ್ತವೆ. ಇವು ಆ ದೇಶದ ಸಂಸ್ಕೃತಿ-ಪರಂಪರೆಯ ದ್ಯೋತಕವಾಗಿರುವುದಲ್ಲದೆ ಪ್ರಸ್ತುತ ಪೀಳಿಗೆಯ ಜನರಿಗೆ ಹಾಗೂ ಮುಂಬರುವ ಪೀಳಿಗೆಗೂ ನಮ್ಮ ಗತ ಇತಿಹಾಸದ ಅದ್ಭುತ ಕಥೆಯನ್ನು ಹೇಳುತ್ತವೆ. ಇವುಗಳನ್ನು ಸಾಮಾನ್ಯವಾಗಿ ವಸ್ತುಸಂಗ್ರಹಾಲಯದಲ್ಲಿಟ್ಟು ಸಂರಕ್ಷಿಸಲಾಗುತ್ತಿದೆ. ಓದಿ, ಓದಿಸಿ! ಭಾರತ ಒಂದೇ ಅಲ್ಲ, ಜಗತ್ತಿನ ಮೂಲೆ ಮೂಲೆಗಳಲ್ಲಿ ಘಟಿಸುತ್ತಿರುವ ಇಂತಹ ವಿಶಿಷ್ಟ ವಿದ್ಯಮಾನಗಳನ್ನು ಹೊತ್ತು ನ್ಯೂಸ್18 ಕನ್ನಡ ಜಾಲತಾಣ ನಿಮ್ಮ ಮುಂದೆ ಬರುತ್ತಿದೆ. ಈ ಎಲ್ಲ ವಿದ್ಯಮಾನಗಳನ್ನು ನಿಮ್ಮ ಮನಸ್ಸು ಒಂದಕ್ಕೊಂದು ಜೋಡಿಸಿಕೊಳ್ಳಬಹುದು, ಪ್ರತ್ಯೇಕವಾಗಿ ಗಮನಿಸಬಹುದು. ಆದರೆ ನಿರ್ಲಕ್ಷಿಸಲಂತೂ ಸಾಧ್ಯವಿಲ್ಲ! ಬೇರೆಲ್ಲೂ ಸಿಗದ ವಿಭಿನ್ನ ಪ್ರಯತ್ನವನ್ನು ನೀವೂ ಓದಿ, ಇತರರಿಗೂ ಓದಿಸಿ. Editors Note ಬದಲಾವಣೆ ಜಗದ ನಿಯಮ. ಈ ಬದಲಾವಣೆ ಹೀಗೆ ಆಗುತ್ತೆ..ಯಾವಾಗ ಆಗುತ್ತೆ? ಹೇಗಾಗುತ್ತೆ? ಇದಕ್ಕೆ ‘ಇದಂ ಇತ್ಥಂ’ ಎಂಬ ಉತ್ತರ ಇಲ್ಲ. ಇದು ಪ್ರಕೃತಿಯ ವಿವೇಚನೆಗೆ ಬಿಟ್ಟಿದ್ದು. ಕೆಲವೊಮ್ಮೆ ಸಹಜ, ಕೆಲವೊಮ್ಮೆ ಅಚ್ಚರಿ, ಕೆಲವೊಮ್ಮೆ ಆಘಾತ, ಕೆಲವೊಮ್ಮೆ ನಿರ್ಲಿಪ್ತ, ಕೆಲವೊಮ್ಮೆ ಮಾತ್ರ ಸುಳಿವು ಸಿಗುವಂಥ ಬೆಳವಣಿಗೆ ಇದು. ಮೂಲದ ನಂಟಿನ ಒಗಟು ಬಿಚ್ಚಿಡುವ ಘಟ್ಟವಿದು. ಸೂಕ್ಷ್ಮವಾಗಿ ಗಮನಿಸಿದಾಗ ಜಗತ್ತಿನಾದ್ಯಂತ ಇಂಥದ್ದೊಂದು ಬದಲಾವಣೆ ಈಗ ಶುರುವಾಗಿದೆಯಾ? ಈಗ ನಡೆಯುತ್ತಿರುವ ಹಲವು ಘಟನೆಗಳು ಈಗಲೇ ನಡೆಯುತ್ತಿರೋದ್ಯಾಕೆ? ಈ ಘಟನೆಗಳಿಗೆ ಪೂರಕ ವಾತಾವರಣ ಮೂಡಿರೋದು ಈಗಲೇ ಯಾಕೆ? ಇಂಥದ್ದೊಂದು ಪ್ರಶ್ನೆಗೆ ಉತ್ತರ ಹುಡುಕುವ ಪಯಣದ ಚಾರಣಿಗರು ಎಲ್ಲ. ಇಂಥದ್ದೇ ಅಪರೂಪದ, ಅಕಲ್ಪನೀಯ, ಘಟನಾವಳಿಗಳ ಹೆಕ್ಕಿ ತೆಗೆದು ನಿಮ್ಮ ಮುಂದಿಡುವ ಪ್ರಯತ್ನವೇ ನಮ್ಮ ಈ ಪುರಾತನರ ಪುನರುತ್ಥಾನ ಅಂದ್ರೆ Ancestors Rising ಲೇಖನ ಮಾಲೆಯ ಮುಖ್ಯ ಉದ್ದೇಶ. ನೀವೂ ನಮ್ಮ ಈ ಪಯಣದ ಭಾಗವಾಗಬೇಕು ಅನ್ನೋದು ನಮ್ಮ ಆಶಯ -ರಾಘವೇಂದ್ರ ಗುಡಿ None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.